ಚಂದನವನದ ಪ್ರತಿಭೆಗಳಾದ ಚರಣ್ರಾಜ್, ಪ್ರಕಾಶ್ರೈ, ಅರ್ಜುನ್ಸರ್ಜಾ, ರಶ್ಮಿಕಾಮಂದಣ್ಣಾ, ಶ್ರೀಲೀಲಾ, ಪೂಜಾಹೆಗ್ದೆ ಮುಂತಾದವರು ನೆರೆಯ ಭಾಷೆಯಲ್ಲಿ ಖ್ಯಾತರಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಸಾಲಿಗೆ ಚಿತ್ರರಂಗದ ಚಾಕಲೇಟ್ ಬಾಯ್ ಅಂತ ಪ್ರೀತಿಯಿಂದ ಕರೆಸಿಕೊಂಡಿರುವ ಧರ್ಮಕೀರ್ತಿರಾಜ್ ಬ್ಲಡ್ ರೋಸಸ್ ಸಿನಿಮಾದ ಮುಖಾಂತರ ಟಾಲಿವುಡ್ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ನಿರ್ದೇಶಕರು ಇವರಿಗೆ ರಂಜಿತ್ರಾಮ್ ಎಂದು ನಾಮಕರಣ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಹಬ್ಬದ ದಿನದಂದು ಪೋಸ್ಟರ್ ಬಿಡಲಾಗಿ ಎಲ್ಲಡೆ ವೈರಲ್ ಆಗಿರುವುದು ತಂಡಕ್ಕೆ ಸಂತಸ ತಂದಿದೆ.
ಎಂ.ಗುರುರಾಜನ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಟಿಬಿಆರ್.ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಹರೀಶ್.ಕೆ ಬಂಡವಾಳ ಹೂಡಿದ್ದು, ಯಲ್ಲಪ್ಪ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕೆ.ಲಕ್ಷಮ್ಮ ಮತ್ತು ಕೆ.ನಾಗಣ್ಣ ಜಂಟಿಯಾಗಿ ಅರ್ಪಣೆ ಮಾಡಿದ್ದಾರೆ.
ಸಮಾಜದಲ್ಲಿ ನಡೆದಿರುವ ಹಾಗೂ ಪ್ರಸಕ್ತ ನಡೆಯುತ್ತಿರುವ ಒಂದಷ್ಟು ನೈಜ ಅಂಶಗಳನ್ನು ಹೆಕ್ಕಿಕೊಂಡು ಅದನ್ನು ಚಿತ್ರಕಥೆಗೆ ಬಳಸಿಕೊಂಡಿದ್ದಾರೆ. ಕ್ರೈಂ, ಥ್ರಿಲ್ಲರ್ ಹಾಗೂ ಆಕ್ಷನ್ ಸಾರ ಇರುವುದರಿಂದ ನಿರ್ದೇಶಕರು ಸಿನಿಮಾದ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
ಧರ್ಮಕೀರ್ತಿರಾಜ್ (ರಂಜಿತ್ರಾಮ್), ಅಪ್ಸರರಾಣಿ ಇಬ್ಬರು ಮುಖ್ಯ ಪಾತ್ರದಲ್ಲಿ ಪೋಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕ್ರಾಂತಿಕಿಲ್ಲಿ, ಶ್ರೀಲು, ಹಿರಿಯ ನಟ ಸುಮನ್, ಘರ್ಷಣಾಶ್ರೀನಿವಾಸ್, ಟಾರ್ಜಾನ್, ರಾಜೇಂದ್ರ, ಜ್ಯೂ.ರೇಲಂಗಿ, ಜಗದೀಶ್ವರಿ, ಮಣಿಕುಮಾರ್, ಧ್ರುವ, ಅನಿಲ್, ಪ್ರಗ್ಯಾ, ನವಿತಾ, ವೈಷ್ಣವಿ, ಜಬರ್ದಸ್ತ್ ಜಿಎಂಆರ್, ಜಬರ್ದಸ್ತ್ ಬಾಬು, ಜಬರ್ದಸ್ತ್ ರಾಮು, ಈಟಿವಿ ಜೀವನ್, ಮಮತಾರೆಡ್ಡಿ ಮುಂತಾದವರು ಅಭಿನಯಿಸಿದ್ದಾರೆ.
ಸಂಗೀತ ಪೆದ್ದಪಲ್ಲಿ ರೋಹಿತ್, ಛಾಯಾಗ್ರಹಣ ಬೋಗಿರೆಡ್ಡಿ ಸಿವಕುಮಾರ್, ’ಹನುಮಾನ್’ ಖ್ಯಾತಿಯ ನಂದು ಸಾಹಸ ಮತ್ತು ರಾಜೇಶ್ ಲಂಕ ಹಾಗೂ ಹುಸೇನ್ ಸಹ ಆಕ್ಷನ್ ಮಾಡಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಮಣಿಕುಮಾರ್, ರವಿತೇಜ್.ಸಿ.ಹೆಚ್ ಸಂಕಲನ ವಿಎಫ್ಎಕ್ಸ್ ಶಿರಾ ಪ್ರೊಡಕ್ಷನ್ಸ್, ಎಸ್ ಎಫ್ಎಕ್ಸ್ ಶ್ರೀನು ನಾಗಪುರಿ, ಡಿಐ ಸಂಜೀವ್ ಮಾಮಡಿ, ಕಾಸ್ಟ್ಯೂಮ್ ಡಿಸೈನರ್ ಮಂದಾತಿ ಗೀತಿಕ ಅವರದಾಗಿದೆ. ಹೈದರಬಾದ್, ರಾಮೋಜಿರಾವ್ ಸ್ಟುಡಿಯೋ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸಿನಿಮಾವು ಪೋಸ್ಟ್ ಪ್ರೊಡಕ್ಸನ್ ಕೆಲಸದಲ್ಲಿ ಬ್ಯುಸಿ ಇದೆ.