ಬೆಂಗಳೂರು (23-03-2025): ಮಹಿಳೆಯರನ್ನು ಸಂಭಾವ್ಯ ಗರ್ಭಕಂಠ ಕ್ಯಾನ್ಸರ್ ದಿಂದ ಪಾರು ಮಾಡುವ ಹೆಚ್ ಪಿ ವಿ ಲಸಿಕಾ ಪ್ರಾಯೋಗಿಕ ಅಭಿಯಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಹೇಳಿದರು.
“ಗರ್ಭಕಂಠ ಕ್ಯಾನ್ಸರ್ ಮುಕ್ತ ಕರ್ನಾಟಕ” ಧ್ಯೇಯದೊಂದಿಗೆ “ಕರ್ನಾಟಕದಲ್ಲಿ ಹೆಚ್ ಪಿ ವಿ ಲಸಿಕಾ ಅಭಿಯಾನ: ಜಾಗೃತಿಯಿಂದ ಅನುಷ್ಠಾನದವರೆಗೆ” ಕುರಿತು ಹೆಚ್ ಡಿ ಆರ್ ಫೌಂಡೇಷನ್ ಮತ್ತು ಆರ್ಟಿಸ್ಟ್ ಫಾರ್ ಹರ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿ ಅವರು ಮಾತನಾಡಿದರು.
ಹದಿಹರೆಯದ ಹೆಣ್ಣು ಮಕ್ಕಳಿಗೆ ಹೆಚ್ ಪಿ ವಿ ಲಸಿಕೆ ಹಾಕುವುದರಿಂದ ಭವಿಷ್ಯದಲ್ಲಿ ಅವರಿಗೆ ಎದುರಾಗಬಹುದಾದ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಸ್ತಾವವು ಸರ್ಕಾರದ ಮುಂದಿದ್ದು, ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದಿನೇಶ್ ವಿವರಿಸಿದರು.
ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ 90-70-90 ಸೂತ್ರಕ್ಕೆ (14 ವರ್ಷದೊಳಗಿನ ಶೇ 90ರಷ್ಟು ಹೆಣ್ಣು ಮಕ್ಕಳಿಗೆ ಲಸಿಕೆ, ಇಪ್ಪತ್ತೈದು ವರ್ಷದ ನಂತರ ಶೇ 70ರಷ್ಟು ಮಹಿಳೆಯರ ಸ್ಕ್ರೀನಿಂಗ್, ಬಾಧಿತರ ಪೈಕಿ ಶೇ 90ರಷ್ಟು ಮಹಿಳೆಯರಿಗೆ ಚಿಕಿತ್ಸೆ ಲಭ್ಯತೆ) ಅನುಗುಣವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನ ನಡೆಯಲಿದೆ. ಈ ವಿಷಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಸಚಿವರು ನುಡಿದರು.
ಇದಲ್ಲದೇ, ಈ ಸಲದ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕದ ಹಿಂದುಳಿದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಲಸಿಕೆ ಹಾಕುವ ಕಾರ್ಯಕ್ರಮ ಪ್ರಕಟಿಸಿ ಹಣ ತೆಗೆದಿಡಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷ 14 ವರ್ಷ ಪೂರೈಸುವ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಮುಂಬರುವ ದಿನಗಳಲ್ಲಿ ಈ ಲಸಿಕೆಯ ಬೆಲೆ ಕೂಡ ತಗ್ಗುವ ಸಾಧ್ಯತೆ ಇದ್ದು, ಎಲ್ಲಾ ಹೆಣ್ಣು ಮಕ್ಕಳಿಗೂ ಇದು ಲಭ್ಯವಾಗಬೇಕು ಎಂಬುದು ಸರ್ಕಾರದ ಇರಾದೆಯಾಗಿದೆ ಎಂದರು.
ಏಪ್ರಿಲ್ 1ರಂದು ರಾಜ್ಯದಲ್ಲಿ “ಗೃಹ ಆರೋಗ್ಯ” ಉಪಕ್ರಮಕ್ಕೆ ಚಾಲನೆ ನೀಡಲಾಗುವುದು. ಇದರಡಿಯಲ್ಲಿ, ಮಹಿಳೆಯರನ್ನು ಆರೋಗ್ಯ ಉಪಕೇಂದ್ರಗಳಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಸೇರಿದಂತೆ ಸುಮಾರು 15 ಅನಾರೋಗ್ಯಗಳ ಪತ್ತೆಗಾಗಿ ಸ್ಕ್ರೀನಿಂಗ್ ಗೆ ಒಳಪಡಿಸಲಾಗುವುದು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಹಚ್ಚುವ ದಿಸೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಕ್ರೀನಿಂಗ್ ಗೆ ಒಳಪಡಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಇದಕ್ಕಾಗಿ, ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸುವ ಕಾರ್ಯವನ್ನೂ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಹೆಚ್ ಪಿ ವಿ ಅಭಿಯಾನದ ರೂವಾರಿ ಹಾಗೂ ಆರ್ಟಿಸ್ಟ್ ಫಾರ್ ಹರ್ ಸಿಇಒ ಡಾ.ಹೇಮಾ ದಿವಾಕರ್ ಅವರು ಮಾತನಾಡಿ, ಕಳೆದ 3 ತಿಂಗಳಿಂದ ರಾಜ್ಯದ ವಿವಿಧೆಡೆ 14 ವರ್ಷದೊಳಗಿನ 4,560 ಬಾಲಕಿಯರಿಗೆ ಹೆಚ್ ಡಿ ಆರ್ ಫೌಂಡೇಷನ್ ವತಿಯಿಂದ ಉಚಿತ ಹೆಚ್ ಪಿ ವಿ ಲಸಿಕೆ ನೀಡುವ ಜೊತೆಗೆ 1,500 ಮಹಿಳೆಯರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. ಇದೇ ವೇಳೆ, “ತಾಯಿಯನ್ನು ತಪಾಸಣೆಗೆ ಒಳಪಡಿಸಿ, ಮಗಳಿಗೆ ಲಸಿಕೆ ಹಾಕಿಸಿ”, “ಕ್ಯಾನ್ಸರ್ ನಿಮ್ಮನ್ನು ಕೊಲ್ಲುವ ಮುನ್ನ ನೀವು ಅದನ್ನು ಕೊಲ್ಲಿ” ಎಂಬ ಘೋಷವಾಕ್ಯಗಳ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು.
ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ಇಂಡಿಯಾ (ಎ ಹೆಚ್ ಪಿ ಐ) ಅಧ್ಯಕ್ಷ ಡಾ.ಅಲೆಕ್ಸ್ ಥಾಮಸ್, ಡಾ.ವಿಶಾಲ್. ಹೆಚ್ ಡಿ ಆರ್ ಫೌಂಡೇಷನ್ನಿನ ಡಾ.ದಿವಾಕರ್, ಹೆಲ್ತ್ ಕೇರ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ (ಹೆಚ್ ಎಸ್ ಎಸ್ ಸಿ), ಎಕೊ ಇಂಡಿಯಾ, ಹಾಗೂ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘಟನೆ (ಕೆ ಎಸ್ ಒ ಜಿ ಎ)ಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.